೫ ಜನ ನಿರುದ್ಯೋಗಿ ಯುವಕರು ತಮ್ಮ ಜೀವನ ರೂಪಿಸಿಕೊಳ್ಳುವ ಸಂದರ್ಭದಲ್ಲಿ ಸಮಾಜದಲ್ಲಿ ಕೆಟ್ಟ ಹಾದಿ ತುಳಿದು ಹೇಗೆ ಜೀವನವನ್ನು ಹಾಳುಮಾಡಿಕೊಂಡರು, ಸಮಾಜ ಕಂಟಕರಾಗಿ ಹೇಗೆ ರೂಪುಗೊಂಡರು ಎಂಬುದನ್ನು ನಿರ್ದೇಶಕ ರಘುಜಯ ಅವರು ತಮ್ಮ ರಾಜಧಾನಿ ಚಿತ್ರದಲ್ಲಿ ನಿರೂಪಿಸ ಹೊರಟಿದ್ದಾರೆ. ಬೆಂಗಳೂರು ಸುತ್ತಮುತ್ತ ಹಲವಾರು ಸಾಹಸ ದೃಶ್ಯಗಳು, ಕೌಟುಂಬಿಕ ಹಾಗೂ ಪ್ರೀತಿ-ಪ್ರೇಮದ ದೃಶ್ಯಗಳನ್ನು ಚಿತ್ರೀಕರಿಸಿ ಗೋವಾದ ರಮ್ಯ ತಾಣಗಳಲ್ಲಿ ಹಾಡುಗಳ ಚಿತ್ರೀಕರಣವನ್ನು ಮುಗಿಸಿಕೊಂಡು ಬಂದಿರುವ ಚಿತ್ರತಂಡ ಮಿನರ್ವ ಮಿಲ್ನಲ್ಲಿ ೪ ಜನ ನಾಯಕರು ಭಾಗವಹಿಸಿದ ಕೆಲ ದೃಶ್ಯಗಳನ್ನು ಚಿತ್ರೀಕರಿಸುವುದರೊಂದಿಗೆ ಕ್ಯಾಮೆರಾ ಕೆಲಸಕ್ಕೆ ಮಂಗಳ ಹಾಡಿದೆ. ಶ್ರೀ ದೇವೀರಮ್ಮ ಎಂಟರ್ಪ್ರೈಸಸ್ ಲಾಂಛನದಲ್ಲಿ ಎನ್. ಆರ್. ಸೌಮ್ಯಸತ್ಯನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕ ರಘುಜಯ ಅವರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ಹೆಚ್.ಸಿ. ವೇಣು ಛಾಯಾಗ್ರಹಣ, ಅರ್ಜುನ್ ಸಂಗೀತ ಸಂಯೋಜನೆ ಹಾಗೂ ರವಿವರ್ಮ ಡ್ಯಾನಿ ಅವರ ಸಾಹಸ ಸಂಯೋಜನೆ ಇದ್ದು, ಯಶ್, ಚೇತನ್ ಚಂದ್ರ, ಸತ್ಯ, ಸಂದೀಪ್ ಹಾಗೂ ರವಿತೇಜ - ೫ ಜನ ನಿರುದ್ಯೋಗಿ ನಾಯಕರಾಗಿ ಅಭಿನಯಿಸಿದ್ದು, ನಟಿ ಸಾಧನಾ ಸಿಂಗ್ರ ಪುತ್ರಿ ಶೀನಾ ಶಹಬಾದಿ ನಾಯಕಿಯಾಗಿದ್ದಾರೆ. ಪ್ರಕಾಶ್ ರೈ ಇನ್ಸ್ಪೆಕ್ಟರ್ ಪಾತ್ರ ನಿರ್ವಹಿಸಿದ್ದು, ಉಮಾಶ್ರಿ, ರಾಜು ತಾಳಿಕೋಟೆ, ರಮೇಶ್ ಭಟ್, ಅರುಣ್ ಸಾಗರ್ ಇತರೆ ಪಾತ್ರವರ್ಗದಲ್ಲಿದ್ದಾರೆ.